ಗುರುವಾರ, ಆಗಸ್ಟ್ 1, 2013

ಗತ ವೈಭವ

ಗತ ವೈಭವ

ಪಾಳೂರ ಮಧ್ಯದಲ್ಲೊಂದು ಒಂಟಿಕಂಬ
ನಿಂತಿಹುದು ಬಿಸಿಲು ಮಳೆ ಗಾಳಿಗಳಲ್ಲಿ
ಎದೆಯೊಡ್ಡಿ ಅಂಜದೆ ಅಳುಕದೆ
ಸುತ್ತ ಸುಟ್ಟು ಕರಟಿದ ಊರ
ಹಳೆಯ ವೈಭವದ ಕಥೆ ಹೇಳಲೆಂಬಂತೆ
ಎದೆಯೊಳಗಿನ ದುಗುಡ ಹೊರಗೆಡವಲೆಂಬಂತೆ...

ಸುತ್ತ ಹಸಿರಿತ್ತು,ಹರಿವ ನದಿಯಿತ್ತು
ನಕ್ಕು ನಲಿಯುವ ಮುಗ್ದ ಮಕ್ಕಳ ಗುಂಪಿತ್ತು
ಲಲ್ಲೆ ಹೊಡೆಯುವ ಪ್ರೇಮಿಗಳಲಿ ಮುಗಿಯದ ಪಿಸುಮಾತಿತ್ತು..
ದಂಡಿಸುವ ಅಪ್ಪಂದಿರ ಜೋರಿನೊಳು ಪ್ರೀತಿಯಿತ್ತು
ಅಮ್ಮಂದಿರ ಮಮತೆಯ ಬೇಲಿಯೊಳು ಸುಖವಿತ್ತು
ರಾತ್ರಿಯೊಳು ಭಯಪಡಿಸೊ ಭೂತಗಳ ಕಥೆಯಿತ್ತು...!!!

ಮುತ್ತು ರತ್ನದ ರಾಶಿ,ವಿಜಯನಗರದ ರೀತಿ
ಮಾರ್ಗದೊಳು ಬಿದ್ದಿರಲಿಲ್ಲ,ಆದರೂ ಪ್ರೀತಿಗೆ ಬರವಿರಲಿಲ್ಲ!!
ಸಾಮ್ರಾಜ್ಯಶಾಹಿತ್ವದ ಬಿಸಿರಕ್ತದ ಹಸಿವಿರಲಿಲ್ಲ
ನಿನ್ನೆ ಮೊನ್ನೆಯವರೆಗೂ,ಆಧುನಿಕತೆಯ ಗಾಳಿ ಸೋಕುವವರೆಗೂ..!!
ಎದೆಯೊಳಗಿನ ಪ್ರೀತಿಯ ಸ್ಪರ್ಶಕೆ ಬರವಿರಲಿಲ್ಲ
ಕಾಂಚಾಣದ ಕಡುದೃಷ್ಟಿ ಬೀಳುವವರೆಗೂ...!!

ಏನಿದೆ ಈಗಲ್ಲಿ.,ಬರಿಯ ಅರೆ ಸುಟ್ಟ ಮನೆ
ಅರೆಬೆಂದ ಹೆಣಗಳ ತಿಂಬ ಹದ್ದುಗಳೆ ತಾನೆ..?!!
ಒಂಟಿ ಕಂಬದ ಇಲ್ಲದ ಕಣ್ಣಲ್ಲು ನೀರು
ಮಾತನಾಡಲಾಗದ ಎದೆಯೊಳಗೆ,ಕೂಡಿಟ್ಟ ದುಃಖದ ಭಾರ..!!
ಸೂರ್ಯ ಹುಟ್ಟುವ ಮೊದಲೆ ಕರಗಿತ್ತು ಊರು.
ಕರಟಿ ಬೂದಿಯಾಗಿದ್ದು ಮನಸ ಪ್ರೀತಿಯ ಸೂರು..!!!

ಅಜ್ಞಾತ ಮಾನವ

ಕಾಮೆಂಟ್‌ಗಳಿಲ್ಲ: