ಶನಿವಾರ, ಜುಲೈ 27, 2013

ಕನಸು ಗೀಚಿದ ಹುಡುಗಿ..

ಮನಸ ರಾಜ್ಯದಲಿ ಕನಸು ಮಾರುವ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು..

ಹೊಳೆವ ಕಣ್ಣದು, ನಕ್ಷತ್ರ ಬಿಂಬ
ಚಂಚಲ ರೆಪ್ಪೆ, ಹೊಡೆವಾಗ ಪಟಪಟನೆ
ಎನ್ನ ಹೃದಯವದು ಹೊಸರಾಗ ಹಾಡಿತ್ತು
ಎದೆಯೊಳಗೆ ಸವಿ, ಕನಸು ಮೂಡಿತ್ತು

ಕೆನ್ನೆಯಂಚಲಿ ನವಿರು ಕೆಂಪಿನ ಅಚ್ಚು,
ಅಧರದಂಚಲಿ ನಸು ಮಂದಹಾಸದ ನಲಿವು
ಮನಸಿನಾಳದಲಿ ಸುಳಿದು ಇಳಿದಿತ್ತು
ಕಣ್ಣಿನಲಿ ಅವಳ ಪ್ರತಿಬಿಂಬ ಮೂಡಿತ್ತು

ತಂಗಾಳಿಯಲಿ ಅವಳ ಮುಂಗುರುಳ ಲಾಸ್ಯ
ನನ್ನೊಳಗೆ ಪ್ರೀತಿಯ ಕನಸ ವಿನ್ಯಾಸ
ಬದುಕಿನಂಗಳದಿ ಹೊಸತು ದೀಪ ಬೆಳಗಿತ್ತು
ಅರಿವಿನಂಚಿನ ಗಡಿಯ ಮನಸು ದಾಟಿತ್ತು...


ಅವಳು,
ಮನಸ ರಾಜ್ಯದಲಿ ಕನಸು ಮಾರಿದ ಹುಡುಗಿ
ಬಿಳಿಹಾಳೆಯ ಹೃದಯದಲಿ ಕವನ ಗೀಚಿದಳು.. 

ಮಂಗಳವಾರ, ಜುಲೈ 23, 2013

ಪಯಣ..

ಕತ್ತಲಿನ ರಾತ್ರಿ ಗಾಢಾಂಧಕಾರ
ಬೆಳಕಿಲ್ಲ,ತಿಂಗಳನ ಸುಳಿವೇ ಇಲ್ಲ..
ಮೋಡಗಳ ಹಿಂದೆ ಮರೆಯಾಗಿಹನೋ ಚಂದ್ರ
ಪಯಣಿಗನಿಗೆ ದಾರಿ ಕಾಣಲಿಲ್ಲ...

ಮುಂದೊಂದು ಬಾವಿ,ಪಾತಾಳ ಕೂಪ
ತಿಳಿದಿಲ್ಲ,ಆಳದ ಅರಿವೇ ಇಲ್ಲ
ಮರೆಯಾಗಿಹುದು ಸೊಪ್ಪು ಸದೆಗಳ ಹಿಂದೆ
ದಾರಿಹೋಕನ ನಡಿಗೆ ನಿಲ್ಲಲಿಲ್ಲ...

ಬಿದ್ದರೂ, ಕೂಗಿದರೂ ಕೇಳದು ಶಬ್ದ
ನಿಲ್ಲಲಿಲ್ಲ,ಊಳಿಡುವ ನರಿ ಕೂಗಲಿಲ್ಲ
ಎದ್ದರೂ ಬಿದ್ದರೂ ಕಳೆದುಕೊಳ್ಳುವುದು ಏನು..?
ಪಯಣಿಗನೆಂದೂ ಹೆದರಿ ಕೂರಲಿಲ್ಲ..

ಸತ್ಯ ಮಿಥ್ಯೆಗಳ ನಡುವೆ ಹೊಡೆದಾಟ
ಯಾವುದು ನಿತ್ಯವೋ..? ತಿಳಿದವರು ಇಲ್ಲ..
ಕೊನೆವರೆಗೂ ನಡೆವುದು ನಿಲ್ಲಲಾರದ ಓಟ
ದಾರಿಹೋಕನ ಪಯಣ ಅನಂತವಲ್ಲ..!!!

ಅಜ್ಞಾತಮಾನವ

ಬುಧವಾರ, ಜುಲೈ 17, 2013

ಪ್ರೀತಿಯ ಸ್ಪರ್ಶ..


ಪ್ರೀತಿಯ ಸ್ಪರ್ಶ

ಎದೆಯೊಳಗೆ ಇಳಿದ ಬೇರು
ನರನರದೊಳಗೆ ಬೆಳೆದು ಹರಿದು
ಮನದ ಮೂಲೆಯ ತಿರುವಿನಲಿ
ತಿರುಗಿ,ಭಾವಗಳ ಆವರಿಸಿದಾಗ
ಅರಿವಾದದ್ದು ಆ ಪ್ರೀತಿಯ ಸ್ಪರ್ಶ..!!

ಕತ್ತಲೆಯೊಳಗೆ ಬೆಳಕಿನ ಕಿರಣ
ಮನದೊಳಗೊಂದು ಪುಟ್ಟ ಕನಸು
ಜನಿಸಿ,ನಿದ್ರೆಯೊಳು ಕನವರಿಸಿ
ಬೆಚ್ಚಿ ತಟ್ಟನೆ ಎಬ್ಬಿಸಿದಾಗ
ತಿಳಿದಿದ್ದು ಆ ಪ್ರೀತಿಯ ಸ್ಪರ್ಶ..!!


ಅನಂತ ದಿಗಂತದಾಚೆಗಿನ ಸೌಂದರ್ಯ
ತಂಗಾಳಿಯ ಸುಮಧುರ ಸೌಗಂಧ
ಭಾವಗಳ ಬಾನಿನ ತಾಕಲಾಟ
ಅರಿವಾದಂತೆನಿಸಿ ಮನಸು
ಮಂದಸ್ಮಿತದ ಸೆರಗು ಹೊದ್ದಾಗ
ಕಾಣಿಸಿದ್ದು ಆ ಪ್ರೀತಿಯ ಸ್ಪರ್ಶ..!!

ಅಜ್ಞಾತಮಾನವ

ಸೋಮವಾರ, ಜುಲೈ 8, 2013

ಕಳೆದು ಹೋದವಳು..

ನಿರಾಕಾರ ಮನದ ಜಗದಲಿ
ಜಾಜಿ ಮಲ್ಲಿಗೆಯ ಪರಿಮಳ
ಕನಸೊ ನನಸೊ ತಿಳಿಯದೆ ಕಂಗಾಲಾಗಿ
ಕಂಡದ್ದು ನಿನ್ನ ನಿರ್ಮಲ ಚೆಹರೆ..

ಪ್ರೀತಿಯ ಸ್ಪರ್ಶದ ಅರಿವಿನೊಡನೆ
ನಿನ್ನ ಮೌನದ ಅರ್ಥ ಹುಡುಕಿದ್ದು
ನಿನ್ನೆದೆಯ ಭಾವನೆಯ ತಿಳಿಯಲು
ಪಡಿಪಾಟಲು ಪಟ್ಟದ್ದು..!!!

ನೀ ಚೆಲುವೆ,ಸಂಶಯಕ್ಕಾಸ್ಪದವಿಲ್ಲ
ಆದರೆ ಆ ನಿನ್ನ ಮೌನ ಅರ್ಥವಾಗದ್ದು..!!
ನಿನ್ನೊಳಗೆ ನೀ ಕರಗಿ ಹೋಗುತ್ತಿದ್ದಾಗಲೆ
ನಾ ನಿನ್ನ ಬಯಸಿದ್ದು,ಪ್ರೀತಿಸಿದ್ದು!!

ನಿನ್ನ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಲೇ
ಕನಸ ಮಜಲುಗಳ ಕಟ್ಟಿದ್ದು..!!
ನಿನ್ನ ಗೆಜ್ಜೆಗಳ ಸದ್ದಿನೊಳಗೆ ಕಾಣದ
ಭವಿಷ್ಯದ ಹೆಜ್ಜೆ ಗುರುತನು ಅರಸಿದ್ದು..!!

ನೆನಪಾಗುತ್ತಿದೆ ಗೆಳತಿ,ಪ್ರತಿಕ್ಷಣದಲೂ
ಹೊತ್ತಾರೆಯಿಂದ ಮುಸ್ಸಂಜೆಯವರೆಗೂ..!!
ನೀ ಸಾಗಿದರೇನು ಬಲು ದೂರದವರೆಗೂ
ನನ್ನೆದೆಯೊಳಗಿಂದ ನೀ ಓಡ ಬಲ್ಲೆಯೇನು.?!

ಕೇಳಿಸುತಿದೆ ಗೆಳತಿ, ಕಿವಿಗಳಂಗಣದಲ್ಲಿ
ಮಾತುಗಳು, ನಿನ್ನ ಮೌನದೊಳಗೂ..!!
ಅರಿಯಲಾಗದ ಯಾವುದೋ ಅದೃಶ್ಯ ಬಂಧ
ಬಿಗಿದಿಟ್ಟಿಹುದೊ ನಿನ್ನ ನನ್ನೊಳಗೆ..!!

ನಿನ್ನ ನಾ ಪಡೆದೆ ಎಂದುಕೊಂಡಾಗಲೇ
ಕಾಲ ಚಕ್ರದಲಿ ನೀ ಕರಗಿ ಹೋಗಿದ್ದೆ..!!
ಕೊನೆಗೂ ತಿಳಿಯದ ಮೌನದ ಗುಹೆಯೊಳಗೆ
ಹುದುಗಿ ಕನಸಾಗಿಯೆ ಉಳಿದೆಯೇಕೆ..??!!

ದುಃಖವಿದ್ದರೂ, ಮರೆಯಲಾರೆ ಆ ಪ್ರೀತಿ
ನೀ ನೀಡಿದ್ದು ಬದುಕಿಗೆ, ನಗುವಿನ ಕಾಣಿಕೆ..!!
ಎಲ್ಲಿ ಸಾಗಿದರೂ ನೀ ದೂರ ಅನಂತದವರೆಗೂ
ಗೆಳತಿ, ಹೂವ ಹಾಸಿಗೆಯ ಬದುಕು ನಿನ್ನದಿರಲಿ..!!


ಭಾನುವಾರ, ಜುಲೈ 7, 2013

ನೂರೆಂಟು ಸಾಲು...

    ನೂರೆಂಟು ಸಾಲು

ಅರಿಯದ ಸಾಗರದ ಆಳ
ವಿಶಾಲ ಬಾನಿನ ವೈಚಿತ್ರ
ಮಿನುಗುತಿಹ ಸಹಸ್ರಾರು ತಾರೆ
ಹೊಳೆಯುತಿಹ ದೀಪದ ಭ್ರಾಂತಿ

ಭೂತ ಭವಿಷ್ಯತ್ತಿನ ಸುಂಟರಗಾಳಿ
ನಭೋ ಮಂಡಲದಿ ವರ್ತಮಾನ
ಸುತ್ತ ಮುಸುಕಿದ ಮಂಜಿನ ತೆರೆ
ಬೇರಾಗಿಹ ಬಾಂದಳ- ಧರಿತ್ರಿ..

ಕೈಹಿಡಿದು ನಡೆಸಿದ ಪ್ರೀತಿ
ಮಸಣದಲಿ ಗೋರಿಯ ಕೆಳಗೆ
ಛಿದ್ರ ವಿಚ್ಛಿದ್ರ ಬದುಕಿನ ಗಾಲಿ
ನೊಗ ಹೊತ್ತ ಎತ್ತು ಹೊಡೆದು ಜೋಲಿ

ನೀರಿನಲಿ ಮೀನಿನ ಹೆಜ್ಜೆಯ ಜಾಡು
ಅರಿಯದ ತಳಮಳ,ತಾಕಲಾಟ
ನಿಶೆಯೊಳಗಿನ ಕನಸಿನ ಕನ್ನಡಿ
ಸ್ಥಬ್ದ, ಅಲ್ಲ, ಚೂರು ಚೂರು..!!

ಅರ್ಥವಿಲ್ಲದ ನೂರೆಂಟು ಸಾಲು
ನಡುನಡುವೆ ಮೌನದ ಮಾತು..
ಎದೆ ಬಗೆವ ಭಾವದ ಮಾಲೆ
ಸುಟ್ಟು ಕರಟಿಸುತಿಹ ನೆನಪ ದಿವ್ಯಜ್ವಾಲೆ..!!

ಮುಚ್ಚಿದ ರೆಪ್ಪೆಗಳ ಕೆಳಗೆ
ಅತ್ತಿತ್ತ ಸರಿದಾಡುವ ಜೋಡಿ ಕಣ್ಣು
ಕಾಣಿಸದ ಕತ್ತಲ ಲೋಕದಲೂ
ಬದುಕ ಹುಡುಕುವ ವ್ಯರ್ಥ ಹಮ್ಮು..!!!

ಅರಿಯದ ಸಹಸ್ರಾರು ಉಕ್ತಿಗಳು
ತಿಳಿಯದ ಮನಸಿನ ವೇದನೆ
ಆರ್ದ್ರ ಆರ್ತನಾದದ ಬದುಕು
ಕಳೆದು ಹೋದದ್ದು ಒಂದು ಅಪೂರ್ವ ಮುತ್ತು...!!!

            ಅಜ್ಞಾತಮಾನವ

ಬುಧವಾರ, ಜುಲೈ 3, 2013

ಅರಿವು....

             ಅರಿವು

ಮುಖವದು ಮನದ ಕನ್ನಡಿಯಂತೆ
ಹೇಳಿದವರಾರೋ ,ಅಜ್ಞಾನಿಗಳು ಎಂದೋ..
ನೂರೆಂಟು ಮುಖವಾಡ ಹೊತ್ತವರಿಗೆ
ಯಾವ ಮುಖವಿದೆಯೊ ಮನಸು ಪ್ರತಿಫಲಿಸುವಂತೆ ..?!!
ಎದೆಯೊಳಗೆ ಉರಿ ಉರಿವ ಬೆಂಕಿಯ ಜ್ವಾಲೆ
ತುಟಿಯಲಿ ಮಾಸದ ತುಂಟನಗು
ಕಣ್ಣಲಿ ಇಣುಕಿ ನೋಡುವ ವೇದನೆಯ ತಂತು
ಮೀಟಿದವರಿಗೆ ಅರಿವಾಗಬಹುದೇನೋ ಮನಸ್ಸು..!!!

ನನ್ನ ಮನಸದು ಸೂರ್ಯಕಿರಣಗಳಂತೆ,ಶುಭ್ರ.!!
ಅಂದವರೆಷ್ಟೋ ಮುಗುಳುನಗು ನಗುತ ..!!
ಸೂರ್ಯನಿಗೂ ಮುಸುಕುವುದಿಲ್ಲವೇ ಮೋಡ...?
ಇವರೇನು ಅತೀತರೆ ಕಲ್ಮಶಗಳಿಗೆಲ್ಲವೂ...!!!
ಮನಸದು ಶಾಂತ,ಚಂದಿರನ ಬೆಳದಿಂಗಳಂತೆ
ನಿಷ್ಕಲ್ಮಶ,ಹೊಳೆವ ಬಿಳಿಯ ಬಣ್ಣದಂತೆ..
ಚಂದಿರನ ಮೊಗದಲ್ಲು ಕಲೆಯ ಚಿತ್ತಾರವಿದೆ.,
ಬಿಳಿಯ ಬಣ್ಣದಲು ಇಲ್ಲವೇನು ಬೆರಕೆ...!!!

ಜಗವೇ ಒಂದು ಮುಖವಾಡಗಳ ಊರು
ಅರಿತವರು ಯಾರಿಲ್ಲ..,ಪ್ರತಿಫಲನ ಎಂತು..??!!
ಹೊರಗೆ ಕಾಣುವುದೆಲ್ಲ ನಿಜವಲ್ಲ,ಬಿಳಿಯಾದುದೆಲ್ಲ ಹಾಲಲ್ಲ..
ಸತ್ಯ ಅರಿತವಗೆ ಬಾಳೆಂಬುದೇ ಬರಿಯ ಕನಸು...!!!